Tuesday, November 5, 2013

ಡಿಸ್ನಿ ಲ್ಯಾಂಡ್ ಬಗ್ಗೆ ನನ್ನದೊಂದು ಬರಹ ವಿಜಯ ಕರ್ನಾಟಕದಲ್ಲಿ



 ಪ್ಯಾರಿಸ್‌ನ ಮೋಹಕ ಡಿಸ್ನಿಲ್ಯಾಂಡ್‌

Tuesday, June 4, 2013

ಟಿಬೆಟ್ ನಲ್ಲಿ ಸಿದ್ದಗೊಳ್ಳುತ್ತಿರುವ ಏಷ್ಯಾದ ಅತೀ ದೊಡ್ಡ ಬಾಹ್ಯಾಕಾಶ ವೀಕ್ಷಣಾಲಯ



ಏಷ್ಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ನನಸಾಗುವ ಸೂಚನೆಗಳು ಕಂಡುಬರುತ್ತಿವೆ. ಎತ್ತರದ ಪರ್ವತ ಶಿಖರದಲ್ಲಿ ಒಂದು ಅತ್ಯಾಧುನಿಕ ಹಾಗೂ ಉತ್ಕೃಷ್ಟ ಮಟ್ಟದ ಒಂದು ಅಂತರಿಕ್ಷ ವೀಕ್ಷಣಾಲಯವನ್ನು ಹೊಂದುವ ಮಹತ್ವಾಕಾಂಕ್ಷೆ ಈಡೇರುವ ಲಕ್ಷಣಗಳು ಕಂಡುಬರುತ್ತಿದೆ. ಪ್ರಶಸ್ತ ಸ್ಥಳಕ್ಕಾಗಿ 2 ದಶಕಗಳ ಸತತ ಹುಡುಕಾಟದ ನಂತರ ಎಲ್ಲಾ ರೀತಿಯಲ್ಲೂ ಸರಿಹೊಂದುವ ಒಂದು ಪ್ರದೇಶವನ್ನು ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕಾಗಿ  ಪರಿಗಣಿಸಲಾಗುತ್ತಿದೆ. ಟಿಬೆಟ್ ದೇಶದ ನೈರುತ್ಯ ಭಾಗದಲ್ಲಿರುವ ಅತಿ ಎತ್ತರದ ನಗರಿಎಂಬ ಪರ್ವತವನ್ನು ಬಾಹ್ಯಾಕಾಶ ವೀಕ್ಷಣಾಲಯವನ್ನು ನಿರ್ಮಿಸಲು ಸೂಕ್ತ ಪ್ರದೇಶ ಎಂದು ವಿಜ್ನಾನಿಗಳು ಪರಿಗಣಿಸಿದ್ದಾರೆ. ಕಾಶ್ಮೀರ ಪರ್ವತ ಶ್ರೇಣಿಗಳ ಗಡಿಯಲ್ಲಿರುವ ಈ ನಗರಿಎಂಬ ಪರ್ವತ ಸಮುದ್ರ ಮಟ್ಟದಿಂದ 5100 ಮೀಟರ್ ಎತ್ತರದಲ್ಲಿದೆ. ನಗರಿ ಪರ್ವತದ ಶಿಂಕ್ವಾನ್ನೆ ಎಂಬ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ವೀಕ್ಷಣಾಲಯ ಜಗತ್ತಿನ ಅತ್ಯಂತ ಎತ್ತರದ ವೀಕ್ಷಣಾಲಯವಾಗಲಿದೆ. ಜಗತ್ತಿನ ಅತ್ಯಂತ ಉತ್ಕ್ರಷ್ಟ, ಅತ್ಯಾಧುನಿಕ ಹಾಗೂ ಅತಿ ಎತ್ತರದ ವೀಕ್ಷಣಾಲಯಗಳಾದ ಅಮೆರಿಕಾದ ಹವಾಯಿ ಪ್ರದೇಶದ ಮೌನಾ ಕೀಯಾ ವೀಕ್ಷಣಾಲಯ ಹಾಗೂ ಚೈಲ್ ದೇಶದ ಅಟಕಾಮಾ ಮರುಭೂಮಿಯಲ್ಲಿರುವ ವೀಕ್ಷಣಾಲಯ ಮತ್ತು ಸ್ಪೈನ್ ನ ಕ್ಯಾನರಿ ಐಲಾಂಡ್  ವೀಕ್ಷಣಾಲಯಗಳ ಸಾಲಿಗೆ ಈಗ ಏಷ್ಯದಲ್ಲಿ ನಿರ್ಮಿಸಲು ಯೋಜಿಸುತ್ತಿರುವ ಈ ಶಿಂಕ್ವಾನ್ನೆ ವೀಕ್ಷಣಾಲಯ ಕೂಡ ಸೇರಲಿದೆ ಎಂದು ಬಾಹ್ಯಾಕಾಶ ವಿಜ್ನಾನಿಗಳು ಅಭಿಪ್ರಾಯಪಡುತ್ತಿದ್ದಾರೆ.  ಆದರೆ ಈ ಶಿಂಕ್ವಾನ್ನೆ ವೀಕ್ಷಣಾಲಯದ ನಿರ್ಮಾಣ ಪ್ರಾರಂಭವಾಗಲು ಇನ್ನೂ ಒಂದು ಅಂತಿಮ ಮಟ್ಟದ ಸ್ಥಳ ಪರೀಕ್ಷೆಗಳು ನಡೆಯಬೇಕಿದೆ. ಈ ವರ್ಷ ಶುರುವಾಗಲಿರುವ ಅತಿ ಪ್ರಮುಖ ಹಾಗೂ ಅಂತಿಮ ಮಟ್ಟದ ಪರೀಕ್ಷೆಯಲ್ಲಿ ವಿಜ್ನಾನಿಗಳು ಸತತವಾಗಿ ಈ ಪ್ರದೇಶದ ವಾತಾವರಣದ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ ಹಾಗೂ ಪ್ರಯೋಗಾತ್ಮಕವಾಗಿ ಟೆಲಿಸ್ಕೋಪ್ ವೀಕ್ಷಣೆ ನಡೆಸಲಿದ್ದಾರೆ. ಚೀನಾದ ಬಾಹ್ಯಾಕಾಶ ವಿಜ್ನಾನಿಗಳು ಇನ್ನೂ ಒಂದು ಹಂತ ಮುಂದುವರೆದು ಈ  ಶಿಂಕ್ವಾನ್ನೆ ವೀಕ್ಷಣಾಲಯಕ್ಕಾಗಿ ಎರಡು ಮೇಗಾಫೆಸಿಲಿಟಿಗಳನ್ನು ತಯಾರಿಸುವ ಯೋಜನೆಯಲ್ಲಿ ನಿರತರಾಗಿದ್ದಾರೆ. ಅದೇನೆಂದರೆ ಯುರೋಪ್ಸ್ ಎಕ್ಸ್ಟ್ರೀಮ್ಲಿ ಲಾರ್ಜ್ ಟೆಲಿಸ್ಕೋಪ್(ELT)  ಎಂಬ ಜಗತ್ತಿನ ಅತಿ ದೊಡ್ಡ ಟೆಲಿಸ್ಕೋಪ್ ಗೆ ಸರಿಸಮನಾದ ಟೆಲಿಸ್ಕೋಪ್ ನ ತಯಾರಿಕೆಯ ಯೋಜನೆಯಲ್ಲಿ ತೊಡಗಿಕೊಂಡಿದ್ದಾರೆ. ಅದಲ್ಲದೇ, ಲಾರ್ಜ್ ಸ್ಕೈ ಏರಿಯಾ ಮಲ್ಟಿ ಒಬ್ಜೆಕ್ಟ್ ಫೈಬರ್ ಸ್ಪೆಕ್ಟ್ರೋಸ್ಕೋಪಿಕ್ ಟೆಲಿಸ್ಕೋಪ್ (LAMOST) ಎಂಬ ಉಪಕರಣದ ಯೋಜನೆ ಸಿದ್ದಪಡಿಸುತ್ತಿದ್ದಾರೆ. ಈ ಎಲ್ಲ ಅತ್ಯಾಧುನಿಕ ಪರಿಕರಣಗಳಿಂದ ಸಿದ್ದಗೊಳ್ಳುವ ಈ ವೀಕ್ಷಣಾಲಯ ಏಷ್ಯಾದ ಅತಿ ದೊಡ್ಡ ವೀಕ್ಷಣಾಲಯವಷ್ಟೇ ಅಲ್ಲದೇ ಇತರ ಅಂತರ್ರಾಷ್ಟ್ರೀಯ ವೀಕ್ಷಣಾಲಯಗಳ ಮಾದರಿಗೆ ಸೇರಲಿದೆ.
ಜಗತ್ತಿನ ಅತ್ಯುನ್ನತ ಬಾಹ್ಯಾಕಾಶ ವೀಕ್ಷಣಾಲಯಗಳ ಮಾದರಿಯಲ್ಲೇ ಏಷ್ಯಾದಲ್ಲೊಂದು ವೀಕ್ಷಣಾಲಯ ಸ್ಥಾಪಿಸಬೇಕೆಂಬ ಉದ್ದೇಶದಿಂದ ಪ್ರಶಸ್ತ ಸ್ಥಳಕ್ಕಾಗಿ 1993 ರಲ್ಲಿ ಹುಡುಕಾಟ ಶುರುವಾಯ್ತು.  ಚೀನಾದ ನಾಂಜಿಂಗ್ ಎಂಬ ಪ್ರದೇಶದಲ್ಲಿರುವ ಪರ್ಪಲ್ ಮೌಂಟೇನ್ ಒಬ್ಸರ್ವೇಟರಿ ಎಂಬ ವೀಕ್ಷಣಾಲಯದ ಲಿಯೂ ಕೈಪಿನ್ ಎಂಬ ಬಾಹ್ಯಾಕಾಶ ವಿಜ್ನಾನಿಯ ನೇತ್ರತ್ವದಲ್ಲಿ ಶುರುವಾದ ಈ ಸ್ಥಳ ಪರೀಕ್ಷಣೆ ಈ ಮಹಾತ್ವಾಕಾಂಕ್ಷಿ ಯೋಜನೆಗೆ ಮುನ್ನುಡಿಯಾಯಿತು. ಪ್ರಾರಂಭದಲ್ಲಿ ಚೈನಾ ಹಾಗೂ ಟಿಬೆಟ್ ಗಡಿಭಾಗದಲ್ಲಿರುವ ಕ್ವಿಂಗೈ-ಟಿಬೇಟಿಯನ್ ಪರ್ವತ ಪ್ರದೇಶಗಳಲ್ಲಿ ಸ್ಥಳ ಸಮೀಕ್ಷೆ ನಡೆಸಲ್ಪಟ್ಟಿತು. ಆದರೆ ಈ ಪ್ರದೇಶ ಅಂತರ್ರಾಷ್ಟ್ರೀಯ ವೀಕ್ಷಣಾಲಯಕ್ಕೆ ಸರಿ ಹೊಂದದೇ ಪ್ರತಿಕೂಲ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಅತೀವ ನಿರಾಶೆಯಾಯ್ತು. ನಂತರ 2000 ನೇ ಇಸವಿಯಲ್ಲಿ ಟಿಬೆಟ್ ನ ದಕ್ಷಿಣ ಭಾಗದಲ್ಲಿರುವ ಟಿಂಗ್ರಿ ಎಂಬ ಪರ್ವತದಲ್ಲಿ ಸ್ಥಳ ಪರೀಕ್ಷೆ ನಡೆಸಿದಾಗಲೂ ಅಲ್ಲಿಯೂ ಕೂಡ ಪ್ರತಿಕೂಲಕರ ವಾತಾವರಣ ಕಂಡುಬಂದಿದ್ದರಿಂದ ವಿಜ್ನಾನಿಗಳ ತಂಡಕ್ಕೆ ಮತ್ತೊಮ್ಮೆ ನಿರಾಶೆಯಾಯ್ತು. ಚೀನಾ, ಜಪಾನ್, ಸೌತ್ ಕೊರಿಯಾ ಮತ್ತು ತೈವಾನ್ ದೇಶಗಳ ಸಹಯೋಗದಲ್ಲಿ ನಿಯೋಜಿಸಲಾದ ವಿಜ್ನಾನಿಗಳ ಟೀಮ್ ಗೆ ಸುಮಾರು ಒಂದು ದಶಕಗಳ ಕಾಲ ಹೇಳಿಕೊಳ್ಳುವಂತ ಯಾವುದೇ ಬೆಳವಣಿಗೆಯನ್ನು ಸಾಧಿಸಲಾಗಲಿಲ್ಲ. ಆದರೂ ಪ್ರಯತ್ನ ಬಿಡದ ಈ ಟೀಮ್ ಏಶಿಯಾದಲ್ಲಿ ಒಂದು ಅತ್ಯಾಧುನಿಕ ಬಾಹ್ಯಾಕಾಶ ವೀಕ್ಷಣಾಲಯದ ನಿರ್ಮಾಣಕ್ಕಾಗಿ ಪ್ರಶಸ್ತ ಸ್ಥಳದ ಹುಡುಕಾಟದಲ್ಲಿಯೇ ತೊಡಗಿಕೊಂಡಿತ್ತು. ಅಂತೂ 2005 ರ ವೇಳೆಗೆ ಟಿಬೆಟ್ ನ ಈ ನಗರಿ ಪ್ರರ್ವತ ಪ್ರದೇಶ ಪರೀಕ್ಷೆಗೆ ವಿಜ್ನಾನಿಗಳನ್ನು ನಿಯೋಜಿಸಿದರು. ಸ್ಥಳ ಪರೀಕ್ಷೆಯಲ್ಲಿ ನಾಲ್ಕು ಪ್ರಮುಖ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಯ್ತು. ಕ್ಲೌಡ್ ಕವರೇಜ್, ವಿಂಡ್ ಸ್ಪೀಡ್ ಅಂದರೆ ಗಾಳಿಯ ವೇಗ, ವಾಟರ್ ವೆಪೋರ್ ಹಾಗೂ ಟೆಲಿಸ್ಕೋಪ್ ನಿಂದ ಆಕಾಶ ವೀಕ್ಷಣೆಯಲ್ಲಿನ ಸ್ಪಷ್ಟತೆ ಇವುಗಳನ್ನು ಪ್ರಮುಖ ಮಾಪನಗಳನಾಗಿಟ್ಟುಕೊಂಡು ಸ್ಥಳ ಪರೀಕ್ಷಣೆ ಮಾಡಲಾಯ್ತು. ನಗರಿ ಪರ್ವತ ಪ್ರದೇಶದಲ್ಲಿ ಕೆಲಸಮಾಡುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಜನವಸತಿಯೇ ಇಲ್ಲದ ಆ ಪ್ರದೇಶದಲ್ಲಿ ಯಾವ ಮೂಲಭೂತ ಸೌಲಭ್ಯಗಳೂ ಇರಲಿಲ್ಲ. ಅಲ್ಲದೇ, ರಸ್ತೆಯೂ ಕೂಡ ಇಲ್ಲದಿದ್ದುದರಿಂದ ಆ ಪ್ರದೇಶವನ್ನು ತಲುಪಲು ಒಂದು ದಿನಕ್ಕೂ ಹೆಚ್ಚು ಸಮಯ ಹಿಡಿಯುತ್ತಿತ್ತು. ಅಲ್ಲದೇ, ಸಮುದ್ರ ಮಟ್ಟದಿಂದ ಅತಿ ಎತ್ತರದ ಪ್ರದೇಶವಾಗಿದ್ದುದರಿಂದ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿತ್ತು. ಅಲ್ಲಿ ಪ್ರಾಥಮಿಕ ಹಂತಗಳಲ್ಲಿ ಕೆಲಸ ಮಾಡಿದ ಹಾಗೂ ಸ್ಥಳ ಪರೀಕ್ಷೆಯಲ್ಲಿ ಪಾಲ್ಗೊಂಡ ಚೀನಾದ  ನ್ಯಾಷನಲ್ ಆಷ್ಟ್ರೋನೋಮಿಕಲ್ ಒಬ್ಸರ್ವೇಟರೀಸ್ ಆಫ್ ದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್ ನ ವಿಜ್ನಾನಿ ಯಾವೋ ಯಾಂಗ್ಕ್ವಿಯಾಂಗ್ ಹೇಳುವಂತೆ  ನಗರಿ ಪ್ರದೇಶಕ್ಕೆ ಹೋಗುವಾಗ ಕಾರಿನ ಒಂದೊಂದು ಟೈರ್ ನ್ನೂ 4-5 ಸಲ ಬದಲಿಸಬೇಕಾದ ಪರಿಸ್ತಿತಿ ಉಂಟಾಗುತ್ತಿತ್ತು. ಆದರೆ ಅಷ್ಟೆಲ್ಲ ಕಷ್ಟ ಪಟ್ಟು ನಡೆಸಿದ ಪರೀಕ್ಷಣೆ ವ್ಯರ್ಥವಾಗಲಿಲ್ಲ. 2007 ರ ವೇಳೆಗೆ  ಬಾಹ್ಯಾಕಾಶ ವೀಕ್ಷಣಾಲಯ ನಿರ್ಮಿಸಲು ನಗರಿ ತುಂಬಾ ಪ್ರಶಸ್ತ ಸ್ಥಳ ಎಂಬುದು ಖಚಿತವಾಗಿತ್ತು. 2007 ರಲ್ಲಿಯೇ ಸ್ಥಳ ನಿಗದಿಯಾದರೂ 2008 ರಲ್ಲಿ ಟಿಬೆಟ್ ನಲ್ಲಿ ಶುರುವಾದ ದಂಗೆಯಿಂದಾಗಿ ವೀಕ್ಷಣಾಲಯ ನಿರ್ಮಾಣದ ಮುಂದಿನ ಯೋಜನಾಕಾರ್ಯಗಳಿಗೆ ತೊಡಕು ಉಂಟಾಯ್ತು. ಅದೇ ವರ್ಷದ ಅಂತ್ಯದ ವೇಳೆಗೆ ಟಿಬೆಟ್ ನಲ್ಲಿ ಶಾಂತಿ ನೆಲೆಸಿದ ಮೇಲೆ ಮತ್ತೆ ಯೋಜನಾಕಾರ್ಯ ಶುರು ಮಾಡುವ ಹೊತ್ತಿಗೆ ಅಲ್ಲಿನ ಪರಿಸರವೂ ಕೂಡ ವಾಸ ಯೋಗ್ಯವಾಗಿ ಕೆಲಸ ಮಾಡಲು ಅನುಕೂಲಕರ ವಾತಾವರಣವೇರ್ಪಟ್ಟಿತ್ತು. 2010 ರಲ್ಲಿ ನಗರಿಯ ರಾಜಧಾನಿ ನಗರವಾದ ಶಿಂಕ್ವಾನ್ನೆ ಯಲ್ಲಿ ಒಂದು ವಿಮಾನ ನಿಲ್ದಾಣ ನಿರ್ಮಿಸಲಾಯ್ತು. ಇದರಿಂದಾಗಿ ಅಲ್ಲಿಗೆ ತಲುಪಲು ಮಾಡಬೇಕಾಗಿದ್ದ ಪರ್ವತಾರೋಹಣದ ಕಷ್ಟ ನಿವಾರಣೆಯಾಯ್ತು. ಹಾಗೆಯೇ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ವಿದ್ಯುತ್ ಸರಬರಾಜು ಮಾಡಿಕೊಳ್ಳಲು ಸಾಧ್ಯವಾಯ್ತು. ಸ್ಯಾಟಲೈಟ್ ಡಿಷ್ ಗಳನ್ನು ಅಳವಡಿಸಿ ದೂರವಾಣಿ ಸಂಪರ್ಕ ಏರ್ಪಡಿಸಿಕೊಳ್ಳಲಾಯ್ತು.
ನಗರಿಯಲ್ಲಿ ಕೈಗೊಂಡ ಪ್ರಾಥಮಿಕ ಪ್ರಯೋಗಗಳು ಮಿಶ್ರ ಫಲವನ್ನು ನೀಡಿವೆ. ಚೀನಾದ ವಿಜ್ನಾನಿ ಯಾವೋ ಪ್ರಕಾರ ಪ್ರಾಥಮಿಕವಾಗಿ ವಿಜ್ನಾನಿಗಳು ಅಂದುಕೊಂದಷ್ಟು  ಗಾಳಿಯ ಬಿರುಸು ಇಲ್ಲದಿರುವುದು ಸಮಾಧಾನಕರ ವಿಷಯ. ಆದರೆ ಮಾನ್ಸೂನ್ ನ ಸಮಯದಲ್ಲಿ ಹೆಚ್ಚಿನ ದಿನಗಳಲ್ಲಿ ಮೋಡ ಕವಿದಿರುವುದರಿಂದ ಬಾಹ್ಯಾಕಾಶ ವೀಕ್ಷಣೆಗೆ ಸಾಧ್ಯವಾಗುವುದಿಲ್ಲ. ಆದರೆ ಈ ತೊಡಕುಗಳನ್ನು ಬಿಟ್ಟರೆ ನಗರಿ ಅತ್ಯುತ್ತಮ ಬಾಹ್ಯಾಕಾಶ ವೀಕ್ಷಣಾಲಯವಾಗುವುದರಲ್ಲಿ ಸಂಶಯವಿಲ್ಲ ಎಂಬುದು ಇನ್ನೋರ್ವ ವಿಜ್ನಾನಿ ಕೈಫು ಅವರ ಅಭಿಪ್ರಾಯ. ವಿಜ್ನಾನಿ ಕೈಫು ಹೇಳುವಂತೆ ನಗರಿಯಲ್ಲಿ ನ ಟೆಲಿಸ್ಕೋಪ್ ಗಳು ಮೌನಾ ಕೀಯಾ ದಲ್ಲಿನ ಟೆಲಿಸ್ಕೋಪ್ ಗಿಂತ 30% ಹೆಚ್ಚು ಫೋಟೋನ್ ಗಳನ್ನು ಮಿಡಿಲ್ ಇನ್ಫ್ರೆರೆಡ್ ಬ್ಯಾಂಡ್ ನಲ್ಲಿ ಸೆರೆಹಿಡಿಯುತ್ತವೆ.
ಮುಂದಿನ ಬೇಸಿಗೆಯ ವೇಳೆಗೆ ಈ ಯೋಜನೆಗೆ ಕೈಜೋಡಿಸಿದ ಎಲ್ಲ ದೇಶಗಳ ವಿಜ್ನಾನಿಗಳು ಚೀನಾದಲ್ಲಿ ಸಭೆ ಸೇರಲಿದ್ದು ನಗರಿ ವೀಕ್ಷಣಾಲಯಕ್ಕೆ ಬೇಕಾದ ಟೆಲಿಸ್ಕೋಪ್ ಗಳ ಬಗ್ಗೆ ನಿರ್ಧರಿಸಲಿದ್ದಾರೆ. ತೈವಾನ್ ದೇಶ 50-ಸೆಂಟಿಮೀಟರ್ ಗಳ ಆಪ್ಟಿಕಲ್ ಟೆಲಿಸ್ಕೋಪ್ ನ್ನು ನಗರಿ ವೀಕ್ಷಣಾಲಯಕ್ಕೆ ಕಳಿಸುವ ಇಂಗಿತ ವ್ಯಕ್ತಪಡಿಸಿದೆ. ಜಪಾನ್ ದೇಶವು 60-ಸೆಂಟಿಮೀಟರ್ ಗಳ ಆಪ್ಟಿಕಲ್ ಮತ್ತು ಇನ್ಫ್ರೆರೆಡ್ ಟೆಲಿಸ್ಕೋಪ್ ಗಳನ್ನು ಕಳಿಸುವ ಯೋಚನೆ ಹೊಂದಿದೆ. ಚೀನಾ ದೇಶವು ಎರಡು ಅತೀ ದೊಡ್ಡ ಟೆಲಿಸ್ಕೋಪ್ ಗಳನ್ನು ತಯಾರಿಸುವ ಯೋಜನೆ ಸಿದ್ದಪಡಿಸುತ್ತಿದೆ.
ನಗರಿಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ಅವಶ್ಯಕವೆನಿಸುವ ಇನ್ನೂ ಹಲವು ರೀತಿಯ ಉಪಕರಣಗಳನ್ನು ನಿರ್ಧರಿಸಲು ಮುಂದಿನ 2-3 ವರ್ಷಗಳಲ್ಲಿ ವೀಕ್ಷಣಾಲಯದಲ್ಲಿ ಸಂಗ್ರಹಿಸುವ ದಾಖಲೆಗಳು ದೊರೆತ ಮೇಲಷ್ಟೇ ನಿರ್ಧರಿಸಲು ಸಾಧ್ಯ ಎಂದು ವಿಜ್ನಾನಿ ಕೈಫು ಹೇಳುತ್ತಾರೆ. ಆದರೆ ಹಲವರನ್ನು ಕಾಡುತ್ತಿರುವ ಪ್ರಶ್ನೆಯೆಂದರೆ ಚೈನೀಸ್ ಸರಕಾರವು ಕಾಲಕಾಲಕ್ಕೆ ಫಾರಿನರ್ಸ್ ಗಳಿಗೆ ಟಿಬೆಟ್ ಗೆ ಬರಲು ಅನುಮತಿ ನಿಷೇದಿಸುತ್ತಿರುತ್ತದೆ. ಇದರಿಂದ ಅಂತರ್ರಾಷ್ಟ್ರೀಯ ಬಾಹ್ಯಾಕಾಶ ವೀಕ್ಷಣಾಲಯಕ್ಕೆ ತೊಡಕಾಗಬಹುದು ಎಂಬುದು ಹಲವರ ಅಭಿಪ್ರಾಯ. ಚೈನೀಸ್ ವಿಜ್ನಾನಿಗಳು ಚೈನಾ ಸರಕಾರದೊಡನೆ ಈ ವಿಷಯವಾಗಿ ಚರ್ಚೆ ನಡೆಸುತ್ತಿವೆ. ಎಲ್ಲವೂ ಸರಾಗವಾದಲ್ಲಿ ಏಷಿಯಾದ ಬಾಹ್ಯಾಕಾಶ ವಿಜ್ನಾನಿಗಳ ಬಹುದಿನಗಳ ಕನಸು ಶೀಘ್ರದಲ್ಲೇ ನನಸಾಗಲಿದೆ

---- ದಿಕ್ಸೂಚಿ November 2012



ರಷ್ಯಾದಿಂದ ಏಷ್ಯಾಗೊಂದು ತೂಗು ಸೇತುವೆ



ರಷ್ಯಾದಿಂದ ಏಷ್ಯಾ ಗೆ ಒಂದು ಸೇತುವೆ ನಿರ್ಮಿಸಿದರೆ ಹೇಗಿರುತ್ತೆ... ಇದು ನಿಜವಾಗುವ ಸೂಚನೆ ಕಂಡುಬರುತ್ತಿದೆ. ರಷ್ಯಾಕ್ಕೆ ಸೇರಿದ ಒಂದು ನಡುಗಡ್ಡೆ ರಸ್ಕಿ ಐಲ್ಯಾಂಡ್ಸ್ ಗೆ ರಷ್ಯದಿಂದ ಒಂದು ಸೇತುವೆ ನಿರ್ಮಿಸುವ ಯೋಜನೆ ಸಿದ್ದವಾಗುತ್ತಿದೆ. ಈ ಸೇತುವೆ ಆರ್ಕಿಟೆಕ್ಚರ್ ಕ್ಷೇತ್ರದಲ್ಲಿ ಒಂದು ಅದ್ಭುತವೆನಿಸಲಿದ್ದು ಜಗತ್ತಿನ ಅತೀ ಉದ್ದದ ತೂಗುಸೇತುವೆಯಾಗಲಿದೆ. 3100 ಮೀಟರ್ ಉದ್ದವಿರುವ ಹಾಗೂ ಐಫೆಲ್ ಟವರ್ ನಷ್ಟೆ ಎತ್ತರದ ಈ ಸೇತುವೆಯ ನಿರ್ಮಾಣಕ್ಕೆ 1 ಬಿಲಿಯನ್ ಡಾಲರ್ ಗಳು  ಖರ್ಚಾಗಲಿವೆ ಎಂದು ಅಂದಾಜಿಸಲಾಗಿದೆ. ಬರೀ 5000 ಜನರು ವಸತಿಯಾಗಿರುವ ಈ ನಡುಗಡ್ಡೆಗೆ ಇಷ್ಟೊಂದು ಖರ್ಚು ಮಾಡಿ ಸೇತುವೆ ನಿರ್ಮಿಸುವುದು ಮೇಲ್ನೋಟಕ್ಕೆ ಅರ್ಥಹೀನ ಎನಿಸಿದರೂ ಈ ಸೇತುವೆಯಿಂದ ಬೇರೆಯದೇ ರೀತಿಯಲ್ಲಿ ದೊಡ್ಡ ಪ್ರಮಾಣದ ಪ್ರಯೋಜನ ಪಡೆಯಬೇಕು ಎಂಬುದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯೋಚನೆ. ಈ ಯೋಜನೆಯ ಮೂಲಕ ಇಷ್ಟು ವರ್ಷಗಳ ಕಾಲ ರಷ್ಯಾ ಸರಕಾರದ ಅಲಕ್ಷ್ಯಕ್ಕೆ ಒಳಗಾದ ಪೂರ್ವ ಭಾಗದ ಗಡಿ ಪ್ರದೇಶಗಳ ಬೆಳವಣಿಗೆ ಹಾಗೂ ಏಷ್ಯಾದ ಜೊತೆಗೆ ತನ್ನ ವ್ಯಾವಹಾರಿಕ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುವ ಯೋಜನೆ ಸಿದ್ದಪಡಿಸುತ್ತಿದೆ ರಷ್ಯಾದ ಪುಟಿನ್ ಸರಕಾರ. ರಷ್ಯಾದ ಪೂರ್ವ ಗಡಿಪ್ರದೇಶದ ಸುಧಾರಣಾ ಯೋಜನೆ ಹಂತ ಹಂತವಾಗಿ ಹಲ ವರ್ಷಗಳಿಂದ ನಡೆಯುತ್ತಲೇ ಇದೆ. ಪೂರ್ವ ಗಡಿಯಲ್ಲಿರುವ ವ್ಲೋಡಿವೊಸ್ಟೋಕ್ ಪ್ರದೇಶಕ್ಕೆ ಮಾಸ್ಕೋದಿಂದ 9300 ಕಿಲೋ ಮೀಟರ್ ಗಳಷ್ಟು ಉದ್ದದ ರೈಲ್ ಲೈನ್ ನಿರ್ಮಿಸಲಾಗಿದೆ.
ಸೋವಿಯತ್ ಒಕ್ಕೂಟಗಳ ಉದ್ದ ಕಾಲದಲ್ಲಿ ಈ ವ್ಲಾಡಿವೊಸ್ತೋಕ್ ಪ್ರದೇಶ ಮಿಲಿಟರಿ ಕಾರ್ಯಾಚರಣೆಗಳ ಪ್ರಮುಖ ತಾಣವಾಗಿತ್ತು.  ತದನಂತರ ಈ ಪ್ರದೇಶ ಕೈದಿಗಳು ಹಾಗೂ ನಿರಾಶ್ರಿತರ ವಲಸೆ ಪ್ರದೇಶವಾಯ್ತು. 90 ರ ದಶಕಗಳಲ್ಲಿ ಈ ಪೂರ್ವ ಗಡಿಪ್ರದೇಶ ರಷ್ಯಾ ಸರಕಾರದ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಯ್ತು. ಇದರಿಂದಾಗಿ ಅಲ್ಲಿ ಸ್ಥಳೀಯ ಸ್ವಾತಂತ್ರ್ಯ ಗಲಭೆ ಶುರುವಾಯ್ತು. ಅಲ್ಲಿ ಕೆಲವು ಸಂಘಟನೆಗಳು ಆ ಪ್ರದೇಶವನ್ನು ರಷ್ಯದಿಂದ ಬೇರ್ಪಡಿಸಿ ಸ್ವತಂತ್ರ ಪ್ರದೇಶವನ್ನಾಗಿಸಲು  ಚಳುವಳಿ ಶುರುಮಾಡಿದವು. ಈ‌ಸಮಯದಲ್ಲಿ ಹೆಚ್ಚಿನ ಜನ ಆ ಪ್ರದೇಶ ತ್ಯಜಿಸಿ ಹೋದರು. ಈ ಸಂದರ್ಭದಲ್ಲಿ ಇಲ್ಲಿನ ಒಟ್ಟೂ ಜನಸಂಖ್ಯೆಯಲ್ಲಿ ಸುಮಾರು 20% ನಷ್ಟು ಜನರು ಈ ಪ್ರದೇಶ ತ್ಯಜಿಸಿ ವಲಸೆ ಹೋದರು. ಹಾಗಾಗಿ ಈಗ ಈ ಪ್ರದೇಶದ ಜನಸಂಖ್ಯೆ ಬರೀ 6 ಮಿಲಿಯನ್ ಗಳಷ್ಟು. ಚೀನಾ ದೇಶದ ಗಡಿಯಲ್ಲಿರುವ ಈ ಪ್ರದೇಶದ ಜನಸಂಖ್ಯೆ ಚೀನಾ ದೇಶದ 130 ಮಿಲ್ಲಿಯನ್ ಜನಸಂಖ್ಯೆಗೆ ಹೊಲಿಸಿದರೆ ತೀರಾ ಕಡಿಮೆ. ರಷ್ಯಾದ ಈ ರಸ್ಕಿ ಐಲ್ಯಾಂಡ್ ಸ್ವಲ್ಪ ಮಟ್ಟಿಗೆ ಚೈನೀಸ್ ಜನಸಂಖ್ಯೆಯನ್ನು ಕೂಡ ಹೊಂದಿರುವುದರಿಂದ ಈ ನಡುಗಡ್ಡೆಯನ್ನು ಚೀನಾ ಸ್ವಾಧೀನಪಡಿಸಿಕೊಳ್ಳಬಹುದು ಎಂಬ ಭಯ ಕೂಡ ರಷ್ಯಾ ದೇಶಕ್ಕೆ ಇತ್ತು. ಹಾಗಾಗಿಯೇ ಈ ರಸ್ಕಿ ಐಲ್ಯಾಂಡ್ ನ ಮೇಲೆ ಸಂಪೂರ್ಣ ಆಡಳಿತಾತ್ಮಕ ಹಿಡಿತ ಸಾಧಿಸಲು ಕೂಡ ಈ ಸೇತುವೆಯು ಸಹಕಾರಿಯಾಗಲಿದೆ. ರಷ್ಯಾದ ಪೂರ್ವ ಗಡಿ ಪ್ರದೇಶಗಳ ಮೂಲಕ ಸಂಪರ್ಕ ಕೊಂಡಿ ಬೆಸೆದಿರುವ ಈ ಐಲ್ಯಾಂಡ್ ನ ಸುಧಾರಣೆಯ ಜೊತೆಗೆ ರಷ್ಯಾದ ಈ ಪೂರ್ವ ಗದಿಪ್ರದೇಶಗಳೂ ಕೂಡ ಅಭಿವೃದ್ಧಿಯ ಬೆಳಕು ಕಾಣುತ್ತಿವೆ. ಈಗ ರಷ್ಯಾ ಕೈಗೊಳ್ಳುತ್ತಿರುವ ಈ ಪೂರ್ವ ಗಡಿ ಪ್ರದೇಶದ ಸುಧಾರಣಾ ಕ್ರಮಕ್ಕೆ ಮುಖ್ಯ ಕಾರಣ ಈ ಪ್ರದೇಶದಲ್ಲಿ ಕಂಡುಬರುವ ಹೇರಳವಾದ ನೈಸರ್ಗಿಕ ಸಂಪನ್ಮೂಲಗಳು. ಇಲ್ಲಿ ಹೆರಳವಾಗಿರುವ ಖನಿಜ ಸಂಪತ್ತು, ಲೋಹಗಳು, ಅರಣ್ಯ ಸಂಪತ್ತುಗಳು ಪುಟಿನ್ ನೇತ್ರತ್ವದ ರಷ್ಯಾ ಸರಕಾರವನ್ನು ಪೂರ್ವ ಗಡಿಪ್ರದೇಶಗಳತ್ತ ಸೆಳೆದಿವೆ. ಇದಕ್ಕಿಂತಲೂ ಪ್ರಮುಖ ಕಾರಣವೆಂದರೆ ಏಷ್ಯಾದ ಜೊತೆಗೆ ವಾಣಿಜ್ಯ, ವ್ಯವಹಾರಗಳ ಪ್ರಯೋಜನ ಪಡೆದುಕೊಳ್ಳುವುದು. ಅತಿ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ಏಷ್ಯಾದಲ್ಲಿ ಈಗ ನೈಸರ್ಗಿಕ ಶಕ್ತಿ ಮೂಲಗಳು ಹಾಗೂ  ಕಚ್ಚಾ ವಸ್ತುಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಉತ್ತಮ ಮಾರುಕಟ್ಟೆ ಒದಗಿಸುತ್ತಿದೆ. ಈ ಅವಕಾಶದ ಸದ್ಬಳಕೆ ಪಡೆದುಕೊಳ್ಳುವುದು ಈ ಸೇತುವೆ ನಿರ್ಮಾಣದ ಮುಖ್ಯ ಉದ್ದೇಶ ಎನ್ನಬಹುದು. ಏಷ್ಯಾದ ಜೊತೆಗೆ ವಾಣಿಜ್ಯ ವ್ಯವಹಾರಗಳ ಅಭಿವೃದ್ದಿಗೆ ಈ ಸ್ಥಳ ಪ್ರಶಸ್ತವಾಗಿದೆ. ವಾಣಿಜ್ಯ ವ್ಯವಹಾರಗಳಲ್ಲಿ ಪ್ರಮುಖವೆನಿಸುವ ಸರಕು ಸಾಗಣೆಗೆ ಇದು ಹೇಳಿ ಮಾಡಿಸಿದ ಜಾಗ. ರಷ್ಯಾದ ಗ್ಯಾಸ್ ಹಾಗೂ ತೈಲ ಸಂಪನ್ಮೂಲಗಳನ್ನು ಏಷ್ಯಾದ ಮಾರುಕಟ್ಟೆಗಳಿಗೆ ಈ ಪ್ರದೇಶದ ಮೂಲಕ ಸರಾಗವಾಗಿ ಸಾಗಿಸಬಹುದು ಹಾಗೂ ಏಷ್ಯಾದಲ್ಲಿ ಉತ್ಪಾದನೆಗೊಂಡ ವಸ್ತುಗಳನ್ನು ರಷ್ಯಾದ ಮಾರುಕಟ್ಟೆಗಳಿಗೆ ಸಾಗಣೆ ಮಾಡಲು ಅನುಕೂಲಕರವಾಗಿದೆ. ಅಲ್ಲದೇ, ಈಗ ರಷ್ಯಾ ಸರಕಾರ ಆಸ್ತೆಯಿಂದ ನಿರ್ಮಿಸಿರುವ ಹೊಸ ಹೊಸ ರಸ್ತೆಗಳು, ಸೇತುವೆಗಳು, ಅಭಿವೃದ್ದಿಗೊಳಿಸಲ್ಪಟ್ಟ ಎಲ್ಲಾ ಮೂಲ ಸೌಕರ್ಯಗಳಿಂದಾಗಿ ಈ ಪ್ರದೇಶ ರಷ್ಯಾದ ಮುಂದಿನ ವಾಣಿಜ್ಯ ಕೇಂದ್ರವಾಗಿ ರೂಪುಗೊಳ್ಳುವುದರಲ್ಲಿ ಸಂಶಯವಿಲ್ಲ. ಆದರೆ ಅತಿಯಾದ ಬೃಷ್ಟಾಚಾರಕ್ಕೆ ಹೆಸರಾದ ಈ ಪ್ರದೇಶದಲ್ಲಿ ಸರಕಾರಿ ನೀತಿ ನಿಯಮಗಳು, ರಫ್ತು ಆಮದುಗಳಿಗೆ ಇರುವ ಆಡಳಿತ ತೊಡಕುಗಳು, ತೆರಿಗೆಯ ನೀತಿಗಳು ವಾಣಿಜ್ಯ ವ್ಯವಹಾರಗಳ ಬೆಳವಣಿಗೆಗೆ ದೊಡ್ಡ ತೊಡಕಾಗಿವೆ. ಹಾಗಾಗಿ ಈ ತೊಡಕುಗಳ ನಿವಾರಣೆಗೆ ಸರಕಾರ ಪ್ರಬಲ ಕ್ರಮ ಕೈಗೊಳ್ಳುವುದು ಅತಿ ಅವಶ್ಯಕವಾಗಿದೆ. ಈಗ ರಷ್ಯಾ ತನ್ನ ಪೂರ್ವ ಗಡಿಪ್ರದೇಶಗಳಲ್ಲಿ ನಿರ್ಮಿಸಿರುವ ಸೇತುವೆಗಳು, ಅತಿದೊಡ್ಡ ರೈಲು ಲಿಂಕ್ ಗಳು ಇಂಥ ದೊಡ್ಡ ದೊಡ್ಡ ಯೋಜನೆಗಳಲ್ಲಿ ರಷ್ಯಾದ ಸಾಮರ್ಥ್ಯವನ್ನು ನಿರೂಪಿಸಿವೆ. ಆದರೆ ಈ ಪ್ರದೇಶಗಳಲ್ಲಿ ಈಗ ಸಮರ್ಥ ಸರಕಾರಿ ಆಡಳಿತ ಅತಿ ಅವಶ್ಯವಾಗಿದೆ. ಬ್ರಷ್ಟಾಚಾರದಿಂದ ಬಳಲುತ್ತಿರುವ ಸರಕಾರಿ ಹಾಗೂ ಸಾಮಾಜಿಕ ವ್ಯವಸ್ಥೆಯಲ್ಲಿನ ಈ ಬಲಹೀನತೆಯನ್ನು ತೊಲಗಿಸಿ ಸಮರ್ಥ ಹಾಗೂ ದಕ್ಷ ಆಡಳಿತ ಜಾರಿಗೆ ಬರಬೇಕಾಗಿದೆ. ಇಲ್ಲವಾದಲ್ಲಿ, ವಾಣಿಜ್ಯೋದ್ದೇಶಗಳಿಗಾಗಿ ಇಷ್ಟೊಂದು ಖರ್ಚುವೆಚ್ಚಗೊಳಿಸಿ ಅಭಿವೃದ್ದಿಗೊಳಿಸಿರುವುದು ವ್ಯರ್ಥವಾಗಿಬಿಡುವ ಸಂಭವವಿದೆ. ಹಾಗೂ ರಸ್ಕಿ ಐಲಾಂಡ್ ಗೆ ನಿರ್ಮಿಸಲಾಗುತ್ತಿರುವ ಈ ಸೇತುವೆ ಒಂದು ಮಹತ್ವಾಕಾಂಕ್ಷಿ ಉದ್ದೇಶದ ವ್ಯಫಲ್ಯದ ಪ್ರತೀಕವಾಗಿಬಿಡುವ ಸಂಭವವಿದೆ

---ದಿಕ್ಸೂಚಿ October 2012

Wednesday, April 3, 2013

ಹೆಣ್ಣಿನ ಹೋರಾಟಕ್ಕೆ ಕೊನೆ ಎಂದು ? ..

20 ಶತಮಾನಗಳಿಂದ ಬೆಳೆದುಬರುತ್ತಿರುವ ನಾಗರೀಕತೆ ಮನುಷ್ಯನನ್ನು ಸಾಣೆ ಹಿಡಿದು ಪರಿಪಕ್ವಗೊಳಿಸುವ ಬದಲು ಅಮಾನವೀಯತೆಯನ್ನು, ಕೃತಕತೆಯನ್ನು ತುಂಬುತ್ತಾ ಯಾವ ದಿಕ್ಕಿಗೆ ಸಾಗಿದೆ ಜಗತ್ತು ಎಂದು ಬೆಚ್ಚಿ ಬೀಳಿಸುವಂತ ಘಟನೆ ದೆಹಲಿಯ ಯುವತಿಯ ಮೇಲೆ ನಡೆದ ಸರಣಿ ಅತ್ಯಾಚಾರ. ಮಾನಸಿಕ ಹಾಗೂ ಬೌದ್ದಿಕ ಮಟ್ಟದಲ್ಲಿ ಗಂಡಿಗಿಂತ ಒಂದಿನಿತೂ ಕಡಿಮೆ ಇಲ್ಲ ಎಂಬುದನ್ನು ಹೆಣ್ಣು ಈಗಾಗಲೇ ಸಾಬೀತು ಪಡಿಸಿದರೂ ರಟ್ಟೆ ಬಲದಲ್ಲಿ ಕೊಂಚ ಕಡಿಮೆಯಾಗಿರುವುದೇ ಹೆಣ್ಣಿಗೆ ಎಲ್ಲ ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುತ್ತಿರುವುದು ನಾಗರೀಕತೆಯ ದೊಡ್ಡ ದುರಂತ. ಎಲ್ಲ ವೈರುಧ್ಯಗಳನ್ನು, ಪ್ರತಿಕೂಲತೆಯನ್ನು ಮೀರಿ ತನ್ನ ಅಸ್ತಿತ್ವವನ್ನು ಸ್ಥಾಪಿಸಿಕೊಂಡಿದ್ದೆ ಹೆಣ್ಣಿನ ಈವರೆಗಿನ ಬಹುದೊಡ್ಡ ಸಾಧನೆ ಎಂಬುದು ಹೆಮ್ಮೆ ಪಾಡಬೇಕಾದ ವಿಷಯವೋ ಅಥವಾ ಬೇಸರ ಪಡಬೇಕಾದ ವಿಷಯವೋ ಎಂಬ ಗೊಂದಲ ಕಾಡುತ್ತದೆ ಕೆಲವೊಮ್ಮೆ. ಯಾಕೆಂದರೆ ಹೆಣ್ಣು ತನ್ನ ಕನಿಷ್ಠ ಮೂಲಭೂತ ಹಕ್ಕುಗಳಿಗಾಗಿ, ರಕ್ಷಣೆಗಾಗಿ ಹೋರಾಟ ಮಾಡಿ ಪಡೆದುಕೊಳ್ಳಬೇಕಾದುದು ನಾಗರೀಕತೆಗೆ, ಸಮಾಜಕ್ಕೆ ಶೋಭೆ ತರುವಂತಹ ವಿಷಯವಂತೂ ಖಂಡಿತ ಅಲ್ಲ. ಆದರೆ ಹೆಣ್ಣಿನ ಹೋರಾಟಕ್ಕೆ ಕೊನೆ ಯಾವಾಗ ಎಂಬ ಪ್ರಶ್ನೆ ಈವರೆಗೂ ಪ್ರಶ್ನೆಯಾಗೇ ಉಳಿದಿದೆ. ಈ ಎಲ್ಲ ಗೊಂದಲಗಳ ನಡುವೆ ಸ್ವಲ್ಪ ಸಮಾಧಾನ ಕೊಡುವ ಸಂಗತಿಯೆಂದರೆ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾಗುತ್ತಿರುವುದು. ಈಗ ಮೊನ್ನೆ ಮೊನ್ನೆಯವರೆಗೂ ಅಡಿಗೆ ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣಿನ ಬದುಕು ಬೇರೆ ಬೇರೆ ಕ್ಷೇತ್ರಗಳಲ್ಲಿ ಕೂಡ  ತೆರೆದುಕೊಳ್ಳುತ್ತಿದೆ. ಬೇರೆ ಬೇರೆ ಉದ್ಯೋಗ ಕ್ಷೇತ್ರಗಳಲ್ಲಿ ಪುರುಷರಿಗೆ ಸರಿಸಮಾನವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲೆವು ಎಂಬುದನ್ನೂ ಮಹಿಳೆಯರು ಸಾಬೀತುಪಡಿಸಿದ್ದಾರೆ. ಈ ಬದಲಾವಣೆ ಒಂದೇ ಸಲಕ್ಕೆ ಕ್ಷಿಪ್ರವಾಗಿ ಆಗಿಹೋಗದಿದ್ದರೂ ನಿಧಾನವಾಗಿಯಾದರೂ ಸ್ಥಿರಗತಿಯಲ್ಲಿ ನಡೆಯುತ್ತಿದೆ. ಸಮಾಜದಲ್ಲಿ ಹೆಣ್ಣಿನ ಬಗೆಗಿನ ಧೋರಣೆ ಬದಲಾಗುತ್ತಿದೆ. 90ರ ದಶಕದಲ್ಲಿ ಮಹಿಳೆಯರಿಗಿದ್ದ ಪರಿಸ್ತಿತಿ ಇಂದಿನ ಮಹಿಳೆಗಿಲ್ಲ. ಅಂದಿಗಿಂತ ಇಂದು ಮಹಿಳೆಯರ ಜೀವನ ಮಟ್ಟದಲ್ಲಿ ಗಣನೀಯ ಸುಧಾರಣೆಗಳಾಗಿವೆ. ಅಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಇಂದು ಮಹಿಳೆಯರಿಗೆ ಶಿಕ್ಷಣ ಹಾಗೂ ಉದ್ಯೋಗದ ಅವಕಾಶಗಳು ಸಿಕ್ಕಿವೆ. ಒಟ್ಟಿನಲ್ಲಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಮೂಡಿಸುವ ಈ ಬದಲಾವಣೆ ಸಮಾಧಾನ ಕೊಟ್ಟರೂ ಮಹಿಳೆಯರ ಮೇಲಿನ ದೈಹಿಕ ಶೋಷಣೆ ಹಾಗೂ ಮಾನಸಿಕ ಶೋಷಣೆ ಇನ್ನೂ ಮುಂದುವರೆಯುತ್ತಲೇ ಇರುವುದು ಕೂಡ ನಿಜ. ಸೂಕ್ಷ್ಮ ಸಂವೇದಿ ಮಹಿಳೆ ಮಾನಸಿಕವಾಗಿಯೂ ಆರ್ಥಿಕವಾಗಿಯೂ ಪ್ರಬಲವಾದಾಗಲೇ ಈ ಬದಲಾವಣೆಗೆ ಒಂದು ಅರ್ಥ ಬರುವುದು. ಆದರೆ ಇನ್ನೂ ದಿಗಿಲು ಮೂಡಿಸುವ ಪ್ರಶ್ನೆಯೆಂದರೆ ಮಹಿಳೆಯರ ಮೇಲಿನ ದೈಹಿಕ ಹಾಗೂ ಲೈಂಗಿಕ ಹಿಂಸಾಚಾರಕ್ಕೆ ಕೊನೆ ಯಾವಾಗ ಎಂಬುದು. ಜಗತ್ತಿನ ಎಲ್ಲಾ ಕಡೆಗಳಲ್ಲೂ ಮಹಿಳೆಯರು ಈ ಹಿಂಸೆಗೆ ಒಳಪಡುತ್ತಿದ್ದಾರೆ. ಪ್ರಗತಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಕೂಡ ಮಹಿಳೆಯರ ಮೇಲಿನ ಲೈಂಗಿಕ ಶೋಷಣೆ ತಪ್ಪಿಲ್ಲವಾದರೂ ಪ್ರಗತಿಪರ ರಾಷ್ಟ್ರಗಳಲ್ಲಿ ಇರುವ ಪ್ರಮಾಣಕ್ಕಿಂತ ಸ್ವಲ್ಪ ಕಡಿಮೆ ಎನ್ನಬಹುದು. ನಮ್ಮ ಉತ್ತರ ಭಾರತದಲ್ಲಂತೂ ಈ ಅಪರಾಧ ತೀರ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿರುವುದು ನಿಜಕ್ಕೂ ದುರದೃಷ್ಟಕರ. ಹೆಣ್ಣಿನ ಆತ್ಮವಿಶ್ವಾಸವನ್ನು ತೀರಾ ಕುಗ್ಗಿಸಿಬಿಡುವ ಈ ಶೋಷಣೆಯಿಂದ ಹೆಣ್ಣು ತನ್ನನ್ನು ತಾನು ರಕ್ಷಿಸಿಕೊಳ್ಳುವ ಉಪಾಯ ಕಂಡುಕೊಳ್ಳಬೇಕಿದೆ. ಹೆಣ್ಣು ರಟ್ಟೆ ಬಲದಲ್ಲಿ ಸ್ವಲ್ಪ ಕಡಿಮೆಯಾಗಿರುವುದೇ ಮಹಿಳೆಯರ ಮೇಲಿನ ಈ ದೈಹಿಕ ಶೋಷಣೆಗೆ ಕಾರಣವಾದರೆ ಮಹಿಳೆಯರಲ್ಲಿರುವ ಸಂಘಟನಾ ಶಕ್ತಿಯೇ ಈ ಪ್ರಶ್ನೆಗೆ ಉತ್ತರವಾಗಬಲ್ಲದೇನೋ. ಇಂದು ಮಹಿಳೆಯರಿಗೆ ಸಿಗುತ್ತಿರುವ ಸಾಮಾಜಿಕ ಸ್ಥಾನಮಾನಕ್ಕೆ ಹಾಗೂ ಮಹಿಳೆಯರ ಜೀವನದಲ್ಲಿ ಆಗಿರುವ ಮಹತ್ತರ ಬದಲಾವಣೆಗೆ ಛಲ ಬಿಡದ ಮಹಿಳೆಯರ ಹೋರಾಟವೇ ಕಾರಣ. ಅಂದು 1780 ರ ಸಮಯದಲ್ಲಿ ಅಲ್ಲೆಲ್ಲೋ ಫ್ರಾನ್ಸ್ ನಲ್ಲಿ ಶುರುವಾದ ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾಯಿಸುವ ಹಕ್ಕುಬೇಕು” ಎಂಬ ಪ್ರತಿಭಟನೆ ಮೊದಲು ಒಂದು ಸಣ್ಣ ಕಿಡಿಯಿಂದ ಶುರುವಾಗಿ ನಂತರ ಮಹಿಳಾ ಸಂಘಟನೆಗಳ ಮೂಲಕ ಬೃಹತ್ ಚಳುವಳಿಯ ರೂಪ ಪಡೆದುಕೊಂಡು ಮಹಿಳೆಯರ ಜೀವನದಲ್ಲಿ ಬದಲಾವಣೆಯ ಅಲೆ ಏಳುವಂತೆ ಮಾಡಿತು.  ಅಂದು ಅಲ್ಲಿ ಶುರುವಾದ  ಬದಲಾವಣೆಯ ಅಲೆಯಿಂದಾಗಿಯೇ ಇಂದು ಜಗತ್ತಿನಾದ್ಯಂತ ಮಹಿಳೆಯರಿಗೆ ಶಿಕ್ಷಣ ಉದ್ಯೋಗ ಸಾಮಾಜಿಕ ಸ್ಥಾನಮಾನ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗಲಿಕ್ಕಿಲ್ಲ.   18 ಹಾಗೂ 19 ನೇ ಶತಮಾನದಲ್ಲಿ ಲಕ್ಷಾಂತರ ಮಹಿಳೆಯರು ತಮ್ಮ ಸಂಸಾರ, ಗಂಡ, ಮಕ್ಕಳನ್ನು ತೊರೆದು “ಮಹಿಳೆಯರಿಗೆ ಸಮಾನತೆಯ ಹಕ್ಕು” ಎಂಬ ಈ ಕ್ರಾಂತಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟರು.
ಮಹಿಳೆಯರ ಜೀವನದ ಬದಲಾವಣೆಗೆ ಮುನ್ನುಡಿಯಿಟ್ಟ 17 ಮತ್ತು 18 ನೇ ಶತಮಾನದಲ್ಲಿ ಶುರುವಾದ “ಮಹಿಳೆಯರಿಗೂ ಸಮಾಜದಲ್ಲಿ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು ಚಳುವಳಿ.
“ಮಹಿಳೆಯರಿಗೂ ಸಮಾಜದಲ್ಲಿ ಸಮಾನ ಹಕ್ಕು” ಚಳುವಳಿ ಮೊತ್ತ ಮೊದಲು 1780 ಹಾಗೂ 1790 ರ ಸಮಯದಲ್ಲಿ ಫ್ರಾನ್ಸ್ ನಲ್ಲಿ ಶುರುವಾಯಿತು.  ಅಲ್ಲಿಂದ ಮುಂದೆ ಯುರೋಪ್ ನಾದ್ಯಂತ ಶುರುವಾದ ಈ ಚಳುವಳಿಯಲ್ಲಿ ಬರೀ ಮಹಿಳೆಯರೇ ಅಲ್ಲದೆ ಪುರುಷ ವರ್ಗದಲ್ಲಿಯೂ ಕೂಡ ಹಲವಾರು ಜನರ ಹಾಗೂ ಜನನಾಯಕರ ಬೆಂಬಲ ಸಿಕ್ಕಿತ್ತು. ಆಯಾ ದೇಶಗಳಲ್ಲಿ ಅಲ್ಪ ಸ್ವಲ್ಪ ಪ್ರಮಾಣದಲ್ಲಿ ಈ ಚಳುವಳಿ ನಿರಂತರವಾಗಿ ನಡೆಯುತ್ತಲೇ ಇತ್ತು.
ಆನಂತರ ಹೆಚ್ಚಿನ ಮಟ್ಟದಲ್ಲಿ ಶುರುವಾದ ಈ ಚಳುವಳಿಯಿಂದಾಗಿ 1756 ರಲ್ಲಿ ಅಮೆರಿಕಾದ ಲಿಡಿಯಾ ತಾಫ್ಟ್ ಎಂಬ ಮಹಿಳೆ ಕಾನೂನು ಬದ್ದವಾಗಿ ಮತ ಚಲಾವಣೆ ಮಾಡಿದ ಜಗತ್ತಿನ ಮೊತ್ತ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದರು. ಹಾಗಿದ್ದಾಗ್ಯೂ ಮಹಿಳೆಯರಿಗೆ ಮತ ಚಲಾಯಿಸಲು ಬಹಳಷ್ಟು ನಿಬಂಧನೆಗಳು, ಕಟ್ಟುಪಾಡುಗಳು ಇದ್ದವು. ಮಹಿಳೆ ಮತ ಚಲಾವಣೆಯ ಹಕ್ಕು ಪಡೆಯಲು ಸ್ವಂತ ಆಸ್ತಿ ಹೊಂದಿರಬೇಕು, ಮದುವೆಯಾಗದ ಯುವತಿಯಾಗಿರಬೇಕು ಎಂಬೆಲ್ಲ ಹತ್ತು ಹಲವು ನಿಬಂಧನೆಗಳಿದ್ದವು. ಹಾಗಾಗಿ ಮಹಿಳೆಯರಿಗೆ ಮುಕ್ತ ಮತ ಚಲಾವಣೆಯ ಹಕ್ಕಿಗಾಗಿ ಮಹಿಳಾ ಸಂಘಟನೆಗಳ ಚಳುವಳಿ ನಡೆದೇ ಇತ್ತು. ಈ ಚಳುವಳಿಗೆ ಪೂರ್ತಿ ಜೀವ ಬಂದು ಅದು ರಾಜ್ಯಗಳ, ದೇಶಗಳ ಗಡಿಯ ಇತಿಮಿತಿಗಳನ್ನೂ ಮೀರಿ ಹಲವು ರಾಷ್ಟ್ರಗಳ ಮಹಿಳಾ ಸಂಘಟನೆಗಳು ಒಗ್ಗಟ್ಟಾಗಿ ಬೃಹತ್ ಪ್ರತಿಭಟನೆಯಾಗಿ ರೂಪ ತಾಳಿದ್ದು 1840 ರಲ್ಲಿ. ಆ ವರ್ಷ ಲಂಡನ್ ನಲ್ಲಿ ನಡೆದ “ದಲಿತ ಶೋಷಣೆ ಹಾಗೂ ಗುಲಾಮಗಿರಿ” ಪದ್ದತಿಯ ವಿರುದ್ದದ ಚಳುವಳಿಯಲ್ಲಿ ಭಾಗವಹಿಸಲು ಅಮೆರಿಕಾದಿಂದ ಬಂದ ಮಹಿಳಾ ಪ್ರತಿನಿಧಿ ಎಲಿಜಬೆತ್ ಕ್ಯಾಡಿ ಸ್ಟ್ಯಾಂ ಟನ್ ಹಾಗೂ ಇತರ ಮಹಿಳಾ ಪ್ರತಿನಿಧಿಗಳಿಗೆ ಸಭೆಯಲ್ಲಿ  ಕುಳಿತುಕೊಳ್ಳಲು ಸೀಟು ನಿರಾಕರಿಸಲಾಯಿತು. ಅದಕ್ಕೆ ಕಾರಣ ಅವರು ಮಹಿಳೆಯರು ಎಂಬ ಲಿಂಗಬೇಧ ನೀತಿ. ಅದರಿಂದಾಗಿ ಸಿಟ್ಟಿಗೆದ್ದ ಎಲಿಜಬೆತ್ ಇನ್ನಿಬ್ಬರು ಮಹಿಳಾ ಚಳುವಳಿಗಾರ್ತಿಯರಾದ ಲುಕ್ರೆಷಿಯಾ ಮೊಟ್ಟ್ ಹಾಗೂ ಸುಸ್ಯಾನ್ ಬಿ ಅಂಥೋನಿ ಅವರನ್ನು ಭೇಟಿಯಾಗಿ ಚರ್ಚಿಸಿ “ ಮಹಿಳೆಯರಿಗೆ ಸಮಾನತೆ ಹಾಗೂ ಮತ ಚಲಾವಣೆಯ ಹಕ್ಕು” ಚಳುವಳಿಯನ್ನು ದೊಡ್ಡ ಪ್ರಮಾಣದಲ್ಲಿ ಆಯೋಜಿಸುವ ಯೋಜನೆ ಕೈಗೊಂಡರು. 



ಹಲವು ದಶಕಗಳ ಕಾಲ ನಡೆದ ಈ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿತು. ಪ್ರಪ್ರಥಮವಾಗಿ ಮಹಿಳೆಯರಿಗೆ ಯಾವುದೇ ನಿಬಂಧನೆಯಿಲ್ಲದೆ ಎಲ್ಲ ಮಹಿಳೆಯರಿಗೂ ಮತ ಚಲಾವಣೆಯ ಹಕ್ಕು ನೀಡಿ ಮಸೂದೆ ಜಾರಿಗೊಳಿಸಿದ ದೇಶ ನ್ಯೂಜಿಲ್ಯಾಂಡ್. 1893 ರಲ್ಲಿ ಈ ಮಸೂದೆ ಜಾರಿಗೊಳಿಸಿದ ನ್ಯೂಜಿಲ್ಯಾಂಡ್ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ನೀಡಲು ವಿಫಲವಾಯಿತು. ನಂತರ ಎರಡನೆಯದಾಗಿ 1894 ರಲ್ಲಿ ಬ್ರಿಟಿಷ್ ಆಡಳಿತದಲ್ಲಿದ್ದ ಸೌತ್ ಆಸ್ಟ್ರೇಲಿಯಾ ಮಹಿಳೆಯರಿಗೆ  ಮತ ಚಲಾವಣೆಯ ಹಕ್ಕು ಒದಗಿಸಿ ಕೊಟ್ಟಿತು. ಇಲ್ಲಿ ಮಹಿಳೆಯರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನೂ ಕೂಡ ಕಲ್ಪಿಸಿಕೊಡಲಾಯ್ತು. ಯುರೋಪ್ ನಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟ ಮೊದಲ ದೇಶ ಫಿನ್ ಲ್ಯಾಂಡ್. 1906ರಲ್ಲಿ ಫಿನ್ ಲ್ಯಾಂಡ್ ನಲ್ಲಿ ಮತ ಚಲಾಯಿಸುವ ಹಾಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶವನ್ನು ಕಲ್ಪಿಸಿಕೊಡಲಾಯ್ತು. ಹಾಗೆಯೇ 1907 ರಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಬಂದ ಫಿನ್ ಲ್ಯಾಂಡ್ ನ 19  ಮಹಿಳೆಯರು ಜಗತ್ತಿನ ಪ್ರಥಮ ಮಹಿಳಾ ಜನ ಪ್ರತಿನಿಧಿಗಳೆನಿಸಿದರು. ಅದಾದ ನಂತರ ನಾರ್ವೆ, ಡೆನ್ಮಾರ್ಕ್ ದೇಶಗಳೂ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕು ಒದಗಿಸಿಕೊಟ್ಟರು. ಮಹಿಳೆಯರ ಚಳುವಳಿಗೆ ದೊಡ್ಡದಾದ ಹಾಗೂ ಎಲ್ಲ ನಿಬಂಧನೆಗಳಿಂದ ಮುಕ್ತವಾದ ಗೆಲುವು ಸಿಕ್ಕಿದ್ದು ಅಮೇರಿಕಾದಲ್ಲಿ ಮಹಿಳೆಯೂ ಕೂಡ ಸಮಾನ ಪ್ರಜೆ ಎಂಬ ನೀತಿ ಜಾರಿಗೊಳಿಸಿದಾಗ ಮಹಿಳಾ ಚಳುವಳಿಗಳಿಗೆ ಮಹತ್ತರ ತಿರುವು ಸಿಕ್ಕಿದಂತಾಯ್ತು. 1920 ರ ಆಗಸ್ಟ್ 26 ರಂದು ಅಮೇರಿಕಾದಲ್ಲಿ ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕಿನ ಮಸೂದೆ ಮಂಡಿಸಲಾಯಿತು. ಅದರ ಜೊತೆಗೆ ದೇಶದ ಒಬ್ಬ ಪ್ರಜೆಗೆ ಇರುವ ಹಕ್ಕು ಮತ್ತು ಭಾದ್ಯತೆಗಳು ಮಹಿಳೆಗೂ ಅನ್ವಯಿಸುತ್ತವೆ ಅಂದರೆ ಮಹಿಳೆಯೂ ಸಮಾಜದ ಸಮಾನ ಪ್ರಜೆ ಎಂಬ ಮಸೂದೆಯನ್ನೂ ಕೂಡ ಮಂಡಿಸಲಾಯ್ತು. ಸುಮಾರು 100 ವರ್ಷಗಳ ಹೋರಾಟದ ಫಲವಾಗಿ ಮಹಿಳೆಯರು ಗಳಿಸಿಕೊಂಡ ಈ ಯಶಸ್ಸು ಮಹಿಳೆಯರ ಬದುಕಿನ ದಿಕ್ಕನ್ನೇ ಬದಲಿಸುವ ವರದಾನವಾಯ್ತು. ಅಮೇರಿಕಾದಲ್ಲಿ ಈ ಮಸೂದೆ ಜಾರಿಯಾಗುತ್ತಲೇ ಜಗತ್ತಿನ ಹಲವಾರು ದೇಶಗಳಲ್ಲಿ ಮಹಿಳೆಯರು ಒಗ್ಗಟ್ಟಾಗಿ ಈ ಪ್ರತಿಭಟನೆಯನ್ನು ಮುಂದುವರೆಸಿದರು ಹಾಗೂ ಈ ಮಸೂದೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾದರು.  1948 ರಲ್ಲಿ ಉನೈಟೆಡ್ ನೇಷನ್ಸ್ (ಒಕ್ಕೂಟ ರಾಷ್ಟ್ರಗಳು)ನ ಹ್ಯೂಮನ್ ರೈಟ್ಸ್ ಕಮಿಷನ್ ನಿಂದ ಎಲೆನೋರ್ ರೂಸ್ ವೆಲ್ಟ್ ಅಧ್ಯಕ್ಷತೆಯಲ್ಲಿ ಯುನಿವರ್ಸಲ್ ಡಿಕ್ಲೆರೇಷನ್ ಆಫ್ ಹ್ಯೂಮನ್ ರೈಟ್ಸ್ ಅನ್ನುವ ಅಂತರ್ರಾಷ್ಟ್ರೀಯ ಕಾನೂನನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ “ಮಹಿಳೆಯರನ್ನೂ  ಸೇರಿ ಪ್ರತಿಯೊಬ್ಬರಿಗೂ ಆಯಾ ದೇಶದ ಸರ್ಕಾರದಲ್ಲಿ ಭಾಗಿಯಾಗುವ ಅಥವಾ ಪ್ರತಿನಿಧಿಯನ್ನು ಆರಿಸುವ ಹಕ್ಕು ಇದೆ ಎಂಬ ಅಂತಾರಾಷ್ಟ್ರೀಯ  ಕಾನೂನು ಪದ್ದತಿಯನ್ನು ಜಾರಿಗೆ ತರಲಾಯ್ತು.
ಅಲ್ಲಿಂದ ಮುಂದೆ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿ ನಿಧಾನವಾಗಿಯಾದರೂ ಗಣನೀಯವಾಗಿ ಬದಲಾಗುತ್ತಾ ಬಂತು. ಈವರೆಗೆ ಮಹಿಳೆ ಸಾಧಿಸಿದ್ದು, ಸಾಧಿಸುತ್ತಿರುವುದನ್ನೆಲ್ಲಾ ನಾವು ನೋಡುತ್ತಲೇ ಇದ್ದೇವೆ. ವಿದ್ಯೆಯಲ್ಲಿ, ಉದ್ಯೋಗದಲ್ಲಿ, ಮನೆ ಸಂಸಾರ ಸಂಭಾಳಿಸುವುದರಲ್ಲಿ, ಮಕ್ಕಳನ್ನು ಬೆಳೆಸುವಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾಳೆ. ಹೆಚ್ಚಿನ ಸಂದರ್ಭಗಳಲ್ಲಿ ಈ ಎಲ್ಲ ಕೆಲಸಗಳನ್ನೂ ಒಟ್ಟಿಗೇ ಸಮರ್ಥವಾಗಿ ನಿರ್ವಹಿಸಬಲ್ಲಳು ಎಂಬುದನ್ನೂ ಸಾಬೀತುಪಡಿಸಿದ್ದಾಳೆ. ಬೌದ್ಧಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ತಾನು ಗಂಡಿಗಿಂತ ಕಡಿಮೆಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ. ಹಾಗಿದ್ದಾಗ್ಯೂ ಮಹಿಳೆಯರಿಗೆ ದೈಹಿಕ ಶೋಷಣೆಯ ವಿರುದ್ಧ ರಕ್ಷಣೆ ನೀಡಬೇಕಾದ ಅಗತ್ಯ ಇಂದಿಗೂ ಇದೆ. ಜಗತ್ತಿನ ಎಲ್ಲೆಡೆಗಳಲ್ಲಿ ಹೆಣ್ಣಿನ ಮೇಲೆ ದೈಹಿಕ ಹಾಗೂ ಲೈಂಗಿಕ ಶೋಷಣೆ ನಡೆಯುತ್ತಲೇ ಇದೆ. ಶೋಷಣೆಗೆ ಒಳಗಾದ ಹಾಗೂ ಒಳಗಾಗುತ್ತಿರುವ ಹೆಣ್ಣು ಮಕ್ಕಳಿಗೆ ರಕ್ಷಣೆ ಒದಗಿಸಲು ಜಗತ್ತಿನಾಧ್ಯಂತ ಹಲವಾರು ಸಂಘ ಸಂಸ್ಥೆಗಳು ಕಾರ್ಯನಿರತವಾಗಿವೆ. ಅಲ್ಲದೇ, ಮಹಿಳೆಯರ ಮೂಲಭೂತ ಹಕ್ಕು ಸಂರಕ್ಷಣೆಗಾಗಿ ಹಾಗೂ ಸಾಮಾಜಿಕ ಸಮಾನತೆಯನ್ನು ಜಾರಿಗೆ ತರಲು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಯೋಜನೆಗಳು ನೆರವಾದವು. 


ಯುನೈಟೆಡ್ ನೇಷನ್ಸ್ ಸಂಸ್ಥೆಯ ಹಲವು ಪ್ರಮುಖ ಅಂತರ್ರಾಷ್ಟ್ರೀಯ ಸ್ತ್ರೀರಕ್ಷಣಾ ಕ್ರಮಗಳು
ಯುನೈಟೆಡ್ ನೇಷನ್ಸ್ ಸಂಸ್ಥೆ ಮಹಿಳೆಯರ ಹಕ್ಕುಗಳ ಸಂರಕ್ಷಣೆಗಾಗಿ 1981 ರ ಸೆಪ್ಟೆಂಬರ್ 3 ರಂದು ಒಂದು ಅಂತರ್ರಾಷ್ಟ್ರೀಯ ಒಡಂಬಡಿಕೆ ಮಾಡಿಕೊಂಡಿತು. ಕನ್ವೇನ್ನ್ಷನ್ ಆನ್ ದ ಎಲಿಮಿನೇಶನ್ ಆಫ್ ಆಲ್ ಫಾರ್ಮ್ಸ್ ಆಫ್ ಡಿಸ್ಕ್ರೀಮಿನೇಶನ್ ಆಗೈನಸ್ಟ್ ವಿಮೆನ್  (CEDAW-Convention on the Elimination of all forms of Discrimination Against Women) ಎಂಬ ಸಾಮೂಹಿಕ ಒಡಂಬಡಿಕೆಗೆ ಕೆಲವೇ ಕೆಲವು ದೇಶಗಳನ್ನು ಹೊರತು ಪಡಿಸಿ ಸುಮಾರು 50 ದೇಶಗಳು ಬಧ್ದ್ಧತೆ ವ್ಯಕ್ತಪಡಿಸಿದವು. ಇರಾನ್, ಸುಡಾನ್, ಸೋಮಾಲಿಯ, ಕತಾರ್, ನೌರು, ಪಾಲೌ, ತೊಂಗ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಈ ಒಪ್ಪಂದಕ್ಕೆ ಸಹಿ ಮಾಡಲು ಹಲವು ಆಕ್ಷೇಪಣೆಗಳನ್ನಿಟ್ಟರು. ಈ ಒಡಂಬಡಿಕೆಯ ಮೂಲ ಉದ್ದೇಶ ಲಿಂಗ ಬೇಧ ನೀತಿಯನ್ನು ತಡೆಗಟ್ಟಿ ಸಮಾಜದಲ್ಲಿ ಪುರುಷರಿಗಿರುವ ಎಲ್ಲ ಹಕ್ಕು ಬಾಧ್ಯತೆಗಳನ್ನು ಮಹಿಳೆಯರಿಗೂ ಅನ್ವಯಿಸುವಂತೆ ನೋಡಿಕೊಳ್ಳುವುದು. ಅಂದರೆ ಮಹಿಳೆಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾಪಾಡಿ ಮಹಿಳೆಗೆ ಸಮಾಜದಲ್ಲಿ ಸಂವಿಧಾನಬದ್ಧವಾಗಿ ಸಮಾನತೆಯನ್ನು ಜಾರಿಗೆ ತರುವುದು.
ಈ ಒಡಂಬಡಿಕೆಯ ಕೆಲವು ಕಾರ್ಯ ಕಲಾಪಗಳು ಈ ಕೆಳಗಿನಂತಿವೆ :
  • ·         ಎಲ್ಲಾ ಕ್ಷೇತ್ರದಲ್ಲೂ ಎಲ್ಲಾ ಹಂತಗಳಲ್ಲೂ ಡಿಸಿಷನ್ ಮೇಕಿಂಗ್ ನಲ್ಲಿ ಮಹಿಳೆಯರೂ ಕೂಡ ಭಾಗವಹಿಸುವುದನ್ನು ಉತ್ತೇಜಿಸುವುದು.
  • ·         ಉದ್ಯೋಗ ಸ್ಥಳಗಳಲ್ಲಿ ಮಹಿಳೆಯರ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
  • ·         ಕಾನೂನು ರೀತ್ಯಾ ಎಲ್ಲಾ ರಂಗಗಳಲ್ಲೂ ಹಾಗೂ ಸಮಾಜದಲ್ಲೂ ಮಹಿಳೆಯರು ಹಾಗೂ ಪುರುಷರ ಸಮಾನತೆಯನ್ನು ಕಾಯ್ದುಕೊಳ್ಳುವುದು. ಹಾಗೂ ಕಾನೂನಿನ ಮೂಲಕ ಮಹಿಳೆಯರು ಹಾಗೂ ಯುವತಿಯರ ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವುದು.
  • ·         ರಕ್ಷಣಾ ದಳಗಳು ಹಾಗೂ ರಕ್ಷಣಾ ಸಂಸ್ಥೆಗಳ ಮೂಲದ ಲಿಂಗ ಬೇಧ ನೀತಿಯಿಂದ ಮಹಿಳೆಯರಿಗೆ ಆಗುವ ಅನ್ಯಾಯವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವುದು.
  • ·         ಮಹಿಳೆಯರಿಗೆ ಹೊರೆಯಾಗುವಂತ ಹಾಗೂ ಲಿಂಗ ಬೇಧ ನೀತಿಗೆ ಉತ್ತೇಜನ ಕೊಡುವಂತ ಸಮಾಜದ ರೀತಿ ನೀತಿಗಳು ಹಾಗೂ ಕಟ್ಟಳೆಗಳನ್ನು ಗುರುತಿಸಿ ಅವನ್ನು ಶಮನಗೊಳಿಸಲು ಕ್ರಮ ಕೈಗೊಳ್ಳುವುದು.
  • ·         ಸಾಮಾಜಿಕ, ರಾಜಕೀಯ ಹಾಗೂ ಕಾನೂನು ಕ್ಷೇತ್ರಗಳ ನಿರ್ಧಾರಗಳಲ್ಲಿ  ಹಾಗೂ ಅವುಗಳ ಅಳವಡಿಕೆಯಲ್ಲಿ ಮಹಿಳೆಯ ಅನುಭವಗಳು, ಅಗತ್ಯಗಳು ಹಾಗೂ ದೃಷ್ಟಿಕೋನಗಳನ್ನೂ ಗಣನೆಗೆ ತೆಗೆದುಕೊಂಡು ಮಹಿಳೆಗೆ ಸಾಮಾಜಿಕ ನ್ಯಾಯ ಹಾಗೂ ಸಮಾನತೆಯ ನೆಮ್ಮದಿಯನ್ನು ನೀಡುವಂತೆ ಪ್ರೇರೇಪಿಸುವುದು ಹಾಗೂ ಖಚಿತ ಪಡಿಸಿಕೊಳ್ಳುವುದು.

ಮಹಿಳೆಯರ ಮೇಲೆ ಶೋಷಣೆ ಹಾಗೂ ಮಹಿಳೆಯರ ಮೂಲಭೂತ ಹಕ್ಕಿಗೆ ಚ್ಯುತಿ ಬರುವಂತಹ ಚಟುವಟಿಕೆ ಎಲ್ಲೇ ನಡೆಯುತ್ತಿದ್ದರೂ ರಾಷ್ಟ್ರಮಟ್ಟದಲ್ಲಾಗಲಿ ಅಥವಾ ಪ್ರಾದೇಶಿಕ ಮಟ್ಟದಲ್ಲಾಗಲಿ ಯುನೈಟೆಡ್ ನೇಷನ್ಸ್ ಸಂಸ್ಥೆಯ ಈ CEDAW ಕಾರ್ಯಕ್ರಮಮದಡಿಯಲ್ಲಿ ಸಹಾಯ ಪಡೆದುಕೊಳ್ಳಬಹುದು.

ದೈಹಿಕ ಹಾಗೂ ಲೈಂಗಿಕ ಶೋಷಣೆಯಿಂದ ಮಹಿಳೆಯರ ರಕ್ಷಣೆ –ಯುನೈಟೆಡ್ ನೇಷನ್ಸ್ ಸಂಸ್ಥೆಯ ಒಂದು ಯೋಜನೆ
ಪ್ರೊಟೆಕ್ಷನ್ ಫ್ರಮ್ ಸೇಕ್ಷುಯಲ್ ಎಕ್ಸ್ ಪ್ಲೋಯಿಟೇಶನ್ ಅಂಡ್ ಅಬ್ಯೂಸ್ ( PSEA- Protection From Sexual Exploitation and Abuse ) ಎಂಬ ಯೋಜನೆಯಡಿ ಯುನೈಟೆಡ್ ನೇಷನ್ಸ್ ಸಂಸ್ಥೆ ದೈಹಿಕ ಹಾಗೂ ಲೈಂಗಿಕ ಕಿರುಕುಳಕ್ಕೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದಲ್ಲದೆ ಇಂಥ ಅಪರಾಧಗಳನ್ನು ತಡೆಗಟ್ಟಲು ಪ್ರಯತ್ನಿಸುತ್ತಿದೆ. ಈ ಕಾರ್ಯಕ್ರಮದಡಿ ನಡೆಯುವ ಪ್ರಮುಖ ಚಟುವಟಿಕೆಗಳೆಂದರೆ :
·         ಯುನೈಟೆಡ್ ಸದಸ್ಯ ರಾಷ್ಟ್ರಗಳು ಅಥವಾ ಸದಸ್ಯರಲ್ಲದ ರಾಷ್ಟ್ರಗಳಲ್ಲಿ ಕೂಡ ಮಹಿಳೆಯರ ಮೇಲೆ ದೈಹಿಕ ಅಥವಾ ಲೈಂಗಿಕ ಶೋಷಣೆ ನಡೆಯದಂತೆ ನೋಡಿಕೊಳ್ಳುವುದು
·         ಈ ವಿಷಯವಾಗಿ ಜನರಲ್ಲಿ ತಿಳುವಳಿಕೆ ಹಾಗೂ ಅರಿವು ಮೂಡಿಸುವ ವಿಡಿಯೋಗಳನ್ನು ಶಿಬಿರಗಳ ಮೂಲಕ ಸಾಮಾನ್ಯ ಜನತೆಗೆ ತಲುಪುವಂತೆ ಮಾಡಿ ಜನರಲ್ಲಿ ಪ್ರಜ್ನೆ ಮೂಡಿಸುವುದು.
·         ಈ ರೀತಿಯ ದೈಹಿಕ ಹಾಗೂ ಲೈಂಗಿಕ ಶೋಷಣೆಗೊಳಗಾದ ಮಹಿಳೆಯರಿಗೆ ಸಹಾಯ ಹಸ್ತ ನೀಡುವುದು ಮತ್ತು ಅವರಿಗೆ ಹೆಚ್ಚಿನ ರಕ್ಷಣೆ ಒದಗಿಸುವುದು. ಈ ಉದ್ದೇಶಕ್ಕಾಗಿಯೇ ಈ ಕಾರ್ಯಕ್ರಮದಡಿ ನಿಗದಿತ ಯೋಜನೆಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಈ ಕೆಲಸ ನಿರ್ವಹಿಸುವ ಸಂಸ್ಥೆಯ ಸಿಬ್ಬಂದಿಗೆ ಅಗತ್ಯ ತರಬೇತಿ ಹಾಗೂ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗಿದೆ.

ಯುನೈಟೆಡ್ ನೇಷನ್ಸ್ ಸಂಸ್ಥೆಯೇ ಅಲ್ಲದೆ ಇನ್ನೂ ಹಲವು ಸಾವಿರ ಸಂಸ್ಥೆಗಳು ಜಗತ್ತಿನಾದ್ಯಂತ ಮಹಿಳೆಯರ ಹಕ್ಕು ರಕ್ಷಣೆಗಾಗಿ ಹಾಗೂ ಮಹಿಳೆಯ ಶೋಷಣೆಯ ವಿರುದ್ದ ರಕ್ಷಣೆಯ ಕೆಲಸ ಮಾಡುತ್ತಿವೆ. ಅಷ್ಟೇ ಅಲ್ಲದೆ ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಸಮಾನ ಎಂಬ ಪ್ರಜ್ನೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಶೋಷಿತ ಮಹಿಳೆಯರಿಗೆ ಸಹಾಯ ಹಸ್ತ ನೀಡಿ ರಕ್ಷಣೆ ನೀಡಲು ಶ್ರಮಿಸುತ್ತಿವೆ. 

ದಿಕ್ಸೂಚಿ, ಫೆಬ್ರುವರಿ 2013